Friday 2 December 2016

ತುಳಸೀ ದಳ





ಕಷ್ಮೋರಾ!!! ಬಗ್ಗೆ ಹುಷಾರು ನನ್ನ ಪ್ರೀತಿಯ ಓದುಗರೇ...:P "ತುಳಸೀ ದಳ" ಎಂತಹ ಭಯಾನಕ ಕಾದಂಬರಿ... ಯಂಡಮೂರಿ ವೀರೇಂದ್ರನಾಥರ ಕಲೆ ನಿಜಕ್ಕೂ ಶ್ಲಾಘನೀಯ... ಈ ಕಾದಂಬರಿ ಚಲನಚಿತ್ರವಾಗಿದೆ ಆದರೆ ನಾ ಅದನ್ನು ನೋಡಿಲ್ಲ. ಬಹುತೇಕ ಎಲ್ಲರೂ ನೋಡಿರಬಹುದು. ಮಾಟ, ಮಂತ್ರ ,ವೈಜ್ನ್ಯಾನಿಕತೆ, ವೈದ್ಯಕೀಯ, ಮಾನಸಿಕ ಹಿಂಸೆ, ಮೂಢನಂಬಿಜೆ ಹೀಗೆ ಸುಮಾರು ವಿಷಯಗಳನ್ನು ಮಿಶ್ರಣ ಮಾಡಿ ಓದುಗರ ಮನಸ್ಸನ್ನು ಬೆಚ್ಚಿ ಬೀಳಿಸುವುದು ಸತ್ಯ. ಇದರ ಬಗ್ಗೆ ಹೇಗೆ ಬರೆಯುವುದು, ಎಲ್ಲಿಂದ ಆರಂಭಿಸುವುದು ಎಂಬ ಗೊಂದಲ ನನ್ನ ಕಾಡುತ್ತಿದೆ.
ಜನ ಮೂಢನಂಬಿಕೆಯೆಂದು ಮೂದಲಿಸುವ ವಾಮಾಚಾರ ಇಂದಿಗೂ ಕೆಲವೊಂದು ಕಡೆ ನಡೆಯುತ್ತದೆ ಎಂದು ನಂಬುವವರು ಸಾಕಷ್ಟು ಜನ ಇದ್ದಾರೆ. ಅದರಿಂದ ಅನುಭವಿಸಿದ ನರಕಯಾತನೆ ನೋವು ಎಲ್ಲವನ್ನು ನಾವು ಓದಿರ್ತೀವಿ ಆದರೆ ಮನಸು ನಂಬಿದರೂ ಬುದ್ಧಿ ನಂಬಲಾರದು ಅದಕೆ ಕಾರಣ ವೈಜ್ಞಾನಿಕವಾಗಿ ಜಗತ್ತು ಮುಂದುವರೆದಿರುವುದು.
ಒರಿಸ್ಸಾ ರಾಜ್ಯದ "ಬಿಸ್ತಾ" ಗ್ರಾಮದ ಮಾಂತ್ರಿಕನೇ ಕಾದ್ರಾ (ನರರೂಪದ ರಾಕ್ಷಸ ) ಈತನ ಕ್ಷುದ್ರವಿದ್ಯೆಯಿಂದ ನರಕ ಯಾತನೆಯನ್ನು ಅನುಭವಿಸುವ ಮುಗ್ಧ ಮುದ್ದು ಮಗುವೇ "ತುಳಸಿ ". ಅಬ್ಬಾ!!! ಆ ವಾಮಾಚಾರ ಮಾಡಿದ ಬಗೆಯನ್ನು ವಿವರಿಸಲೂ ಮೈ ಝುಮ್ ಎನ್ನುತ್ತೆ ನನಗೆ ಅಷ್ಟು ಭಯಂಕರವಾಗಿದೆ ಆ ವಿದ್ಯೆ.

ಶ್ರೀಧರ್ ಶಾರದಾ ಮದುವೆಯಾಗಿ ಬಹಳ ವರ್ಷಗಳ ನಂತರ ಹುಟ್ಟಿದ ಮಗುವೇ ತುಳಸಿ ಆ ಮನೆಯ ಮುದ್ದಿನ ಕಣ್ಮಣಿ. ಶ್ರೀಧರ್ ನ ಪರಿಶ್ರಮದಿಂದ ಕಂಪನಿಯಲ್ಲಿ ಉನ್ನತ ಹುದ್ದೆ , ವಿದೇಶ ಪ್ರಯಾಣ ಜೊತೆಗೆ ಅವನ ಕಂಪನಿಯ ಮಾಲೀಕನಿಂದ ಲಕ್ಷಾಂತರ ರೂಪಾಯಿ ದಕ್ಕುತ್ತದೆ. ಆದರೆ ಹಣ ದಕ್ಕುವುದು ತುಳಸಿಗೆ ಅದು ಕೂಡ ಆಕೆಗೆ ೧೦ ವರ್ಷ ತುಂಬಿದ ಮೇಲೆ. ಅಕಸ್ಮಾತ್ ಆ ಮಗು ಸತ್ತರೆ ಅದೆಲ್ಲ ಒಂದು ಆಶ್ರಮಕ್ಕೆ ಸೇರುತ್ತದೆ. ಇದನ್ನರಿತ ಮೋಸಗಾರರು ( ಸ್ವಾಮಿ, ಪುಟ್ಟ, ರಾಮಯ್ಯ ,ಸರಸ್ವತೀ ) ಆ ಹಣವನ್ನು ಪಡೆಯಲು ಮಗುವಿಗೆ ವಾಮಾಚಾರವನ್ನು ಪ್ರಯೋಗಿಸುತ್ತಾರೆ.
ಸಾವಿರಾರು ವರ್ಷಗಳ ಹಿಂದೆ ಪ್ರಯೋಗ ಮಾಡದೇ ಮಲಗಿಸಿದ್ದ ಅತ್ಯಂತ ಕ್ರೂರ ಕ್ಷುದ್ರ ದೇವತೆಯೇ ಕಷ್ಮೋರಾ!!!!! ಅದರ ಆಟ ೨೧ ದಿನ ಮೊದಲನೇ ದಿನದಿಂದ ೨೧ನೇ ದನದ ತನಕ ತುಳಸಿ ಇಂತಹ ನರಕ ಅನುಭವಿಸಿತು, ಒಂದೊಂದು ದಿನವೂ ಎಂತೆಂತ ಯಾತನೆಗಳು ಉಂಟಾದವು ಎನ್ನುವುದನ್ನು ನನಗಂತೂ ಹೇಳಲು ಅಸಾಧ್ಯ ಕಾರಣ ಅದು ಓದಿ ಅನುಭವಿಸಲಿದಷ್ಟು ಸುಲಭವಲ್ಲ ಇಲ್ಲಿ ಹೇಳುವುದು. ಮಾಟ ಮಂತ್ರವನ್ನು ನಂಬದೇ, ದೇವರನ್ನು ನಂಬದಿರುವ ವ್ಯಕ್ತಿ ಶ್ರೀಧರ್ ತನ್ನ ಮಗುವನ್ನು ಉಳಿಸುವುದಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾರದೆ ಮಗುವಿಗಾಗಿ ಕಣ್ಣೀರಿಟ್ಟು ಕೊನೆಗೆ ಉಸಿರಾಡುವ ಶವದಂತಾಗಿ ಓದುಗರ ಮನಸ್ಸನ್ನು ಹಿಂಡುವುದು ನಿಜ. ಕೊನೆಯ ೨೪ ಘಂಟೆಗಳನ್ನು ಒಂದೊಂದು ಭಾಗವಾಗಿ ಚಿತ್ರಿಸಿದ್ದಾರೆ ಲೇಖಕರು ಅದು ನಿಜಕ್ಕೂ ರೋಚಕ.
ಶ್ರೀಧರನ ಸ್ನೇಹಿತ ಭ್ರಾಹ್ಮಿನ್ (ಅಭ್ರಕದಬ್ರ ), ವಿದ್ಯಾಪತಿ, ಜಯದೇವ್ , ಪಾರ್ಥಸಾರಥಿ ಇವರೆಲ್ಲ ಈ ಕತೆಯಲ್ಲಿ ಬರುವ ಮುಖ್ಯ ಪಾತ್ರಗಳು ಕೆಲವೊಬ್ಬರು ಜಾದು ಮಾತಾ ಮಂತ್ರ ನಂಬುವರು, ಉಳಿದವರು ಮಾನಸಿಕ ಚಿಕಿತ್ಸೆ ಕೊಡುವ ವೈದ್ಯರು, ಜೊತೆಗೆ ತುಳಸಿಗೆ ಚಿಕಿತ್ಸೆ ಕೊಡುವ ವೈದ್ಯರು, ಇವರುಗಳ ನಡುವೆ ಹುಟ್ಟುವ ಭಿನ್ನ ಅಭಿಪ್ರಾಯಗಳೇ ವಾಮಾಚಾರಕ್ಕೂ ವಿಜ್ಞಾನಕ್ಕೂ ನಡೆಯುವ ಯುದ್ಧ. ಇವೆಲ್ಲವುಗಳ ನಡುವೆ ಆ ಮಗು ಅನುಭವಿಸುವ ನೋವು ಮಾತ್ರ ಹೃದಯ ವಿದ್ರಾವಕ ದೃಶ್ಯ.
ಈ ಪುಸ್ತಕದ ಬಗ್ಗೆ ಜಾಸ್ತಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮಾಟ ಮಂತ್ರ ನಂಬದವರ ತಲೆಯನ್ನೂ ಸಹ ಕೆಡಿಸುವಂತಹ ಮಾಹಿತಿಗಳು ಇದರಲ್ಲಿ ಲೇಖಕರು ಹೇಳಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಕೃತಿ. ಎಲ್ಲರೂ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಮತ್ತೊಮ್ಮೆ ಈ ಕೂಟಕ್ಕೆ ಧನ್ಯವಾದಗಳು.

No comments: