Tuesday 31 January 2017

ಚಿತ್ರ ಕವನ

ಚಿತ್ರ ನೋಡಿ ಬರೆದ ಕವಿತೆ 
ಕವಿತೆ ಕೇಳಿ ಬರೆದ ಚಿತ್ರ 
ಎರಡು ಕಲ್ಪನೆಗಳೇ ಆದರೂ 
ಅದರಲ್ಲಡಗಿಹುದು ಭಾವನೆಗಳ ಆಗರ 
ಅದಕೆ ಏನೋ ಧುಮ್ಮಿಕ್ಕಿ ಹರಿಯುತಿದೆ 
ಚಿತ್ರಕವನಗಳ ಸಾಗರ 

ಕೃಷ್ಣ

ನೀ ಬರುವ ದಾರಿಯ ಕಾಯುತಿದ್ದಳು ಈ ರಾಧೇ 
ಭಾವನೆಗಳ ಸೆಳೆತವ ಸಹಿಸಲಾರದೆ 

ಭಾವನೆಗಳು ಬರಿದಾಗುವ ಮುನ್ನ ನೀ ಕೊಟ್ಟೆ ನವಿಲುಗರಿ 
ಆ ಗರಿಯ ಹಿಡಿದು ಬರೆಯುವಾಸೆ ನಿನ್ನೊಲವಿನ ಹೆಗಲೇರಿ 

ಬಣ್ಣ ಬಣ್ಣದ ಗರಿಯ ನೋಡಿದೆ ಬರೆಯಲು ಚಂದದ ಕವನ 
ಬರೆಯದಂತೆ ತಡೆಯುತಿಹುದು ನಿನ್ನೇ ಆವರಿಸಿರುವ ನನ್ನೀ ಮನ 

ಬರೆಯುವುದ ಬಿಟ್ಟು ಎಣಿಸುತಿರುವೆ ಗರಿಗಳನು 
ಮರೆಯಲು ನೀ ಇರದ ವಿರಹದ ಘಳಿಗೆಗಳನು 

Monday 30 January 2017

ಶಾಲಭಂಜಿಕೆ



"ಶಾಲಭಂಜಿಕೆ" ಕೆ.ಎನ್. ಗಣೇಶಯ್ಯನವರ ಸಣ್ಣಕೆಥೆಗಳ ಸಂಗಮ. ಇಲ್ಲಿ ಬರುವ ೮ ಕಥೆಗಳಲ್ಲಿ ಲೇಖಕರ ಶ್ರಮ ಸಂಶೋಧನೆಯ ಉತ್ಸಾಹ ಎದ್ದು ಕಾಣುತ್ತದೆ. ನನಗೆ ಈ ಪುಸ್ತಕ ಓದಿದಮೇಲೆ ಅನಿಸಿದ್ದು ನಾವು ನೋಡುವ ಎಷ್ಟೋ ಸ್ಥಳಗಳು, ವ್ಯಕ್ತಿಗಳು, ವಿಚಾರಗಳು ಸರಳವಾಗಿ ಕಂಡರೂ ಅವುಗಳ ಹಿಂದೆ ನಮಗೆ ಗೊತ್ತಿಲ್ಲದೇ ಇರುವಂತಹ ಅಥವಾ ನಿರೀಕ್ಷೆ ಮಾಡಲಾರದಂತಹ ರೋಚಕ ಸತ್ಯಗಳು ಅಡಗಿರುತ್ತವೆ ಎಂಬುದು. 

ಇಲ್ಲಿ ಬರುವ ೮ ಕಥೆಗಳ ವಸ್ತುಗಳು ಬೇರೆಬೇರೆಯಾಗಿವೆ ಜೊತೆಗೆ ಇಲ್ಲಿ ಬಂದಿರುವ ಅಂಶಗಳಲ್ಲಿ ಕೆಲವು ಅಂಶಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ.  ಬೆಂಗಳೂರಿನ ಇತಿಹಾಸ, ಶಿಲೆಗಳ ಕೆತ್ತನೆಯ ಹಿಂದಿನ ಉದ್ದೇಶ ಮತ್ತು ಕಥೆ, ನನ್ನನ್ನು ಯಾವಾಗಲೂ ಅಚ್ಚರಿ ಮೂಡಿಸುವ ಪಿರಮಿಡ್ಡಿನ ಇತಿಹಾಸದ ಒಂದು ಎಳೆ, ಅನೇಕ ವೈಜ್ನ್ಯಾನಿಕ, ತಾಂತ್ರಿಕ ವಿಷಯಗಳ ಮೇಲಿನ ಸಂಶೋಧನೆಯ ಶ್ರಮ ಅದಕ್ಕಾಗಿ ಪಟ್ಟ ತೊಂದರೆ ಹೀಗೆ ಬಹಳಷ್ಟು ವಿಷಯಗಳು ಇಲ್ಲಿ ಇವೆ, ಎಲ್ಲವನ್ನು ಕಥೆಯ ರೂಪದಲ್ಲಿ ಬರೆಯುವುದು ಕಷ್ಟ ಅದರಲ್ಲಿ ಗಣೇಶಯ್ಯನವರು ಯಶಸ್ವಿಯಾಗಿದ್ದಾರೆ. 

ಈ ಕೃತಿ ಚಿಕ್ಕದಾದರೂ ಇಲ್ಲಿ ನಾ ಕಲಿತಿದ್ದು ತಿಳಿದಿದ್ದು ಬಹಳ... ಕೆಲವರಿಗೆ  ಇತಿಹಾಸ ಓದುವುದು ನೀರಸವೆನಿಸಿದರೆ ಅದನ್ನು ಹೆಕ್ಕಿ ತೆಗೆಯಲು ಲೇಖರು ಪಟ್ಟ ಶ್ರಮ ಕೈಗೊಂಡ ಸಂಶೋಧನೆ ಎಲ್ಲವೂ ಮನಸ್ಸನ್ನು ಮುದಗೊಳಿಸುತ್ತವೆ. 

Monday 23 January 2017

ಹೇ ಹುಡುಗ ನಾನಲ್ಲ ಬೆಳದಿಂಗಳ ಬಾಲೆ 
ಆದರೆ ನನಗಿಹುದು ಮುದ್ದಾಗಿ ಕವನ ಗೀಚುವ ಕಲೆ 
ಪೋಣಿಸುತಿರುವೆ ಪದಗಳ ಪುಂಜವ 
ಕೊರಳಿಗೆ ಸುತ್ತಿ ಎಳೆಯಲು ಒಲವಿನ ಹಾರವ 
ಅದಕ್ಕೆಂದೆ ನಾ ಬಂದೆ ಬಾನಂಗಳದಲಿ 
ಹುಡುಕಲು ನಿನ್ನ ನಕ್ಷತ್ರಗಳ ಲೋಕದಲಿ 
ಆಗಸದಲಿ ಹರಡಿದ ತಾರೆಗಳ ನಾ ಎನಿಸುವ ಮುನ್ನ 
ಎಲ್ಲಿದ್ದರು ಬಂದು ಅಪ್ಪಿಬಿಡು ನೀ ಎನ್ನ 

Sunday 22 January 2017

ಬರೆದಂತೆಲ್ಲ ಸವಿಯದು ಭಾವನೆಗಳ ಬಂಡಿ 
ಏಕೆಂದರೆ ಸದಾ ಜೊತೆಗಿರುವುದು ಕವನಗಳ ಕೊಂಡಿ 

Saturday 14 January 2017

ಚಿತಾದಂತ



ಡಾ. ಕೆ.ಎನ್.ಗಣೇಶಯ್ಯರವರು ಬರೆದ "ಚಿತಾದಂತ" ರೋಚಕ ಕಾದಂಬರಿಗಳಲ್ಲೊಂದು. ಇತಿಹಾಸದ ಎಳೆಯನ್ನು ಹಿಡಿದು ಇಂದಿನ ಕಾಲದವರೆಗೆ ನಡೆದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದರ ಜೊತೆಗೆ ಪ್ರತಿಯೊಂದು ಮಾಹಿತಿಗೂ ಅವರು ಕೊಟ್ಟಿರುವ ನಕ್ಷೆಗಳು, ಟಿಪ್ಪಣಿ, ಚಿತ್ರ ಮತ್ತು ಸಂಬಂಧಪಟ್ಟ ಪುಸ್ತಾಕಗಳ ಮಾಹಿತಿ ಎಲ್ಲವೂ ನಾವು ನಿಜವಾದ ಘಟನೆಗಳಲ್ಲೇ ಬದುಕುತ್ತಿದ್ದೇವೇನೋ ಎನಿಸುತ್ತದೆ. 

ಇದರಲ್ಲಿ ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರ ಅವನ ಸಂಪತ್ತಿನ ಹುಡುಕಾಟ ಇದೆ. ಎರಡು ಸಾವಿರ ವರ್ಷಗಳ ರೋಚಕ ಇತಿಹಾಸ  ಇಲ್ಲಿದೆ. ಅಂದಿನಿಂದ ಇವತ್ತಿನ ಸ್ವತಂತ್ರ ಭಾರತದ ವರೆಗೂ ಬಂದಿರುವ ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಚಾಣಕ್ಯ, ಕೌಟಿಲ್ಯ ಎಲ್ಲಕ್ಕಿಂತ ಮುಖ್ಯವಾಗಿ ಅಲೆಕ್ಸಾಂಡರ್ ನ ಚಿತ್ರಣ ಅತ್ಯಂತ ಆಶ್ಚರ್ಯದಿಂದ ಕೂಡಿದೆ. ಭೌಧ್ದ ಧರ್ಮದ ಬೆಳವಣಿಗೆ ಮತ್ತು ಇತರ ವಿವರ, ಮೌರ್ಯ ರಾಜ್ಯದ ವಿಷ್ಲೇಶಣೆ, ಸಿಕಂದರನ ದಂಡಯಾತ್ರೆಯ ಸಮಯದ ಭಾರತದ ಸ್ಥಿತಿ ಗತಿ ಹಾಗೂ ನಿಗೂಢ ತೇರವಾದಿಗಳ ವಿಷಯ ದೊಂದಿಗೆ ಬುದ್ಧನ ಹಲ್ಲಿನ ವಿಸ್ಮಯಕಾರಿ ಅಂಶಗಳನ್ನು ಈ ಕಾದಂಬರಿ ಒಳಗೊಂಡಿದೆ.ಎಲ್ಲಕ್ಕಿಂತ ರೋಚಕವೆಂದರೆ ಈ ಕಾದಂಬರಿಯಲ್ಲಿ ಬರುವ ಅಂದರೆ ಇಂದಿನ ವಾಸ್ತಕದಲ್ಲಿ ಚಿತ್ರಿತವಾಗಿರುವ ರಚಿತಾ ಎಂಬ ಹುಡುಗಿಯ ಮುತ್ತಾತ ಬರೆದ ಡೈರಿ, ೧೨ ಭಾಗದ ಸಿಕಂದರನ ಸಿರಿ ಎಂದು ನಾಮಾಂಕಿತಗೊಂಡ ಈ ಡೈರಿಯನ್ನು ಓದುವಾಗ ಅಬ್ಬಾ!!!! ಹೀಗೂ ಉಂಟೆ ಎನಿಸುವುದು. 

ಬುದ್ಧನ ಹಲ್ಲಿಗೂ ಅಲೆಗ್ಸಾಂಡರನ  ಸಂಪತ್ತಿಗೆ ಇರುವ ಸಂಬಂಧ,  ಪ್ರಚಲಿತವಾಗಿ ಬುದ್ಧನ ೪ ಹಲ್ಲುಗಳ ಬಗ್ಗೆ ಇರುವ ವಾದ ವಿವಾದ ಏನು, ಅಂದರೆ ಶ್ರೀಲಂಕಾ, ಜಪಾನ್, ಚೈನಾ, ಕಾಂಬೋಡಿಯಾ ಇತ್ಯಾದಿ ದೇಶಗಳಲ್ಲಿ ಇರುವ ಹಲ್ಲಿನಲ್ಲಿ ಯಾವುದು ಸುಳ್ಳು ಯಾವುದು ನಿಜ ಎನ್ನುವ ಸತ್ಯದ ಹುಡುಕಾಟ, ಅದರ ಸುತ್ತ ಹಬ್ಬಿರುವ ದಂತಕತೆಗಳು, .. ತೇರವಾದಿಗಳು ಎಂದರೆ ಯಾರು, ಅವರೆಲ್ಲಿದ್ದರು, ಈಗಲೂ ಇದ್ದಾರೆಯೇ, ಅಲೆಕ್ಸಾಂಡರ ನ ದಂಡಯಾತ್ರೆ ಮತ್ತು ಅವನು ಸಂಗ್ರಹಿಸಿದ ಖಜಾನೆ ನಿಧಿ ಭಾರತದಲ್ಲಿದೆಯೇ, ಅಬ್ಬಾ!!! ಒಂದಕ್ಕೊಂದು ಸಂಬಂಧವಿಲ್ಲವೆಂದು ಎನಿಸುವ ಅಂಶಗಳು ಹೇಗೆ ಬೆಸೆದಿವೆ ಎನ್ನುವುದು ಇಲ್ಲಿನ ಪ್ರಮುಖ ಅಂಶ. ಕುತೂಹಲ ತಡಿಯಲಾರದೆ, ಕ್ಯಾಂಡಿ ದೇವಾಲಯದ ಚಿತ್ರಗಳನ್ನು ಅಂತರ್ಜಾಲದಲ್ಲಿ ನೋಡಿದೆ, ಒಮ್ಮೆಯಾದರೂ ನೋಡಿ ಬರಬೇಕೆಂಬ ಆಸೆ ಮೂಡಿತು. ಇಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. 

ಈ ಕಾದಂಬರಿಯ ಶೀರ್ಷಿಕೆ ಎಷ್ಟು ವಿಭಿನ್ನವಾಗಿದೆ ಏಕೆ ಈ ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಪ್ರಥಮ ಪುಟದಿಂದ ಕೊನೆಯ ಪುಟದವರೆಗೂ ಒಂದೊಂದು ಯೋಚನೆ ಬರುವಂತೆ ಮಾಡುತ್ತದೆ. ಆದರೆ ಎಲ್ಲ ಊಹೆಗಳನ್ನು ಸುಳ್ಳುಮಾಡಿಸುವಲ್ಲಿ ಗಣೇಶಯ್ಯನವರ ಬರವಣಿಗೆ ಯಶಸ್ವಿಯಾಗಿದೆ. 

Friday 6 January 2017

ಶವದ ಮನೆಯಾದ ಸ್ವರ್ಗ




ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಶವದ ಮನೆಯಾದ ಸ್ವರ್ಗ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್) ಅಲ್ಲಿ ಬರುವ ೫ ಕಥೆಗಳನ್ನು ಓದಿದೆ. ಇಲ್ಲಿವರೆಗೂ ಷರ್ಲಾಕ್ ಹೋಮ್ಸ್ ಬಗ್ಗೆ ಚಲನಚಿತ್ರಗಳಲ್ಲಿ ಮತ್ತು ಇಂಗ್ಲಿಷ್ ಪುಸ್ತಕಗಳಲ್ಲಿ ಕೇಳಿದ್ದೆ ಆದರೆ ಯಾವತ್ತೂ ಅಷ್ಟು ಆಳವಾಗಿ ಓದಿರಲಿಲ್ಲ. ಆದರೆ  ಈ ಪುಸ್ತಕ ಓದಿದ ಮೇಲೆ ಆತನ ಬಗ್ಗೆ ಮತ್ತಷ್ಟು ತಿಳಿಯುವ ಆಸೆಯಿಂದ ವಿವಿಧ ಪುಸ್ತಗಳ ಬಗ್ಗೆ ಹುಡುಕುತ್ತ ಅನೇಕ ರೋಚಕ ಅಂಶಗಳನ್ನು ತಿಳಿದುಕೊಂಡೆ. ಹಾಗಾಗಿ ಈ ಪುಸ್ತಕದಲ್ಲಿ ಬರುವ ಕಥೆಗಳ ಬಗ್ಗೆ ಹೇಳುವುದಕ್ಕಿಂತ ಮತ್ತಿತರ ಮೂಲಗಳಿಂದ ದೊರೆತ ಮಾಹಿತಿಗಳನ್ನು ಹಂಚಿಕೊಳ್ಳಬೇಕೆನಿಸಿದೆ. 

ಷರ್ಲಾಕ್ ಹೋಮ್ಸ್ ೧೯ ಮತ್ತು ೨೦ ನೇ ಶತಮಾನದ ನಡುವೆ ಸರ್ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿ ಮಾಡಿದ ಕಾಲ್ಪನಿಕ ಪಾತ್ರ.  ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ." ಈತ ಕುಶಾಗ್ರ ಮತಿ.ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ,ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ.ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ. ಕಾನನ್‌ ಡಾಯ್ಲ್‌ ರಚಿಸಿದ ನಾಲ್ಕು ಕಾದಂಬರಿ ಮತ್ತು ಐವತ್ತಾರು ಕಿರುಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರವಿದೆ.1887ರ ಬೀಟನ್ಸ್‌ ಕ್ರಿಸ್ಮಸ್‌ ಆನ್ಯುಯಲ್‌ ಸಂಚಿಕೆಯಲ್ಲಿ ಒಂದು ಮತ್ತು 1890ರಲ್ಲಿ ಲಿಪಿನ್ಕಾಟ್ಸ್‌ ಮಂತ್ಲಿ ಮ್ಯಾಗಜೀನ್ ‌ನಲ್ಲಿ ಇನ್ನೊಂದು- ಹೀಗೆ ಮೊದಲ ಎರಡು ಕಥೆಗಳು (ಕಿರು ಕಾದಂಬರಿಗಳು)ಪ್ರಕಟಗೊಂಡವು. 1891ರಲ್ಲಿ ಸ್ಟ್ರ್ಯಾಂಡ್‌ ಮ್ಯಾಗಜೀನ್‌ನಲ್ಲಿ ಕಿರುಕಥೆಗಳ ಮೊದಲ ಸರಣಿಯ ಪ್ರಕಟಣೆಯೊಂದಿಗೆ ಷರ್ಲಾಕ್‌ ಹೋಮ್ಸ್‌ನ ಪಾತ್ರ ಅಪಾರ ಜನಪ್ರಿಯತೆ ಗಳಿಸಿತು. ಮುಂದಿನ ಕಿರುಗತೆಗಳ ಸರಣಿ ಮತ್ತು ಎರಡು ಕಾದಂಬರಿಗಳ ಧಾರಾವಾಹಿ 1927ರತನಕ ಹರಿದು ಬಂತು.ಈ ಕಥೆಗಳು 1875ರಿಂದ 1907ರ ವರೆಗಿನಕಾಲ ಘಟ್ಟವನ್ನು ಒಳಗೊಂಡಿದೆ. ತನಿಖೆಯ ಕೊನೆಯ ಪ್ರಕರಣ 1914ರಲ್ಲಿ ಪ್ರಕಟವಾಯಿತು. 

ಹೀಗೆ ಮಾಹಿತಿಯನ್ನು ಕಲೆಹಾಕುತಿದ್ದಾಗ ಕೆಲವು ಆಶ್ಚರ್ಯಕರ ಅಂಶಗಳು ಕಂಡವು ಅದೇ ಷರ್ಲಾಕ್ ಹೋಮ್ಸ್ ಪಾತ್ರದ ಪ್ರಭಾವ.  ಕಾನನ್ ಡಾಯ್ಲ್ ಷರ್ಲಾಕ್ ಹೋಮ್ಸ್ ಪಾತ್ರವನ್ನು ಸೃಷ್ಟಿ ಮಾಡಿದ  ಆತನ ಬುದ್ಧಿವಂತಿಕೆಯನ್ನು ಚಿತ್ರಿಸಿದ ರೀತಿ ಓದುಗರು ಅವನನ್ನು ಕಾಲ್ಪನಿಕ ವ್ಯಕ್ತಿಯೆನ್ನುವುದನ್ನು ಮರೆತು ಜೀವಂತ ವ್ಯಕ್ತಿಯೆಂದೇ ತಿಳಿಯುವಂತೆ ಮಾಡಿತಂತೆ!!!! ಕೊನೆಗೆ ಡಾಯ್ಲ್ ತನ್ನ ಪಾತ್ರಕ್ಕೆ ಅಂತ್ಯ ಕಾಣಿಸಲು ಕುಖ್ಯಾತ ಕೇಡಿಯೊಬ್ಬನ ಜೊತೆ ಕಾದಾಡುವಾಗ ಸತ್ತು ಹೋದನೆಂದು "ಷರ್ಲಾಕ್ ಹೋಮ್ಸ್ ನ ನೆನಪುಗಳು" ಎಂಬ ಕೃತಿಯಲ್ಲಿ ಚಿತ್ರಿಸಿದ. ಇದರಿಂದ ಬೇಸತ್ತ ಎಲ್ಲ ಯೂರೋಪ್, ಅಮೇರಿಕ, ಆಸ್ಟ್ರೇಲಿಯಾ ದೇಶಗಳ ಜನ ತೀವ್ರ ಪ್ರತಿಭಟನೆಯನ್ನು ಮಾಡಿದ್ದಲ್ಲದೇ, ಜನರು ತಮ್ಮ ಟೋಪಿ ಮತ್ತು ಬಟ್ಟೆಗಳಿಗೆ ಕಪ್ಪು ರಿಬ್ಬನ್ ಸಿಕ್ಕಿಸಿಕೊಂಡು ಷರ್ಲಾಕ್ ಮರಣಕಕ್ಕೆ ಸಂತಾಪ ಸೂಚಿಸಿದರಂತೆ!!!! ಇದೆಲ್ಲ ಸಾಲದಕ್ಕೆ ಓದುಗರೆಲ್ಲ ಕಥೆ ಮುಂದುವರೆಸಬೇಕೆಂದೂ ಫೋನು, ತಂತಿ ಮತ್ತು ಪತ್ರಗಳ ಮೂಲಕ ಒತ್ತಾಯಿಸಿದರು, ಅಷ್ಟು ಅಲ್ಲದೇ ಕೆಲವರಂತೂ ಬೆದರಿಕೆ ಹಾಕಿದರಂತೆ!!! ಇಷ್ಟೆಲ್ಲ ಆದಮೇಲೆ ಡಾಯ್ಲ್ ಬೇರೆ ದಾರಿ ಕಾಣದೆ ಮುಂದಿನ ಕೃತಿಯಲ್ಲಿ "ಕೇಡಿಗಳನ್ನು ಮೂರ್ಖರನ್ನಾಗಿಸಾಲು ಷರ್ಲಾಕ್ ಸತ್ತಂತೆ ನಟಿಸಿದ" ಎಂದು ಅವನನ್ನು ಬದುಕಿಸಿದರಂತೆ. ಹೀಗೆ ಷರ್ಲಾಕ್ ಬಗ್ಗೆ ಹೇಳುತ್ತಾ ಹೋದರೆ ಅಪರಿಮಿತ ರೋಚಕ ಅಂಶಗಳು ಸಿಗುತ್ತವೆ.  ಹಾಗಾಗಿ "ಶವದ ಮನೆಯಾದ ಸ್ವರ್ಗ" ದಲ್ಲಿ ಬರುವ ೫ ಕಥೆಗಳ ಬಗ್ಗೆ ಎನ್ನನು ಹೇಳದೆ ಪ್ರತಿಯೊಂದರಲ್ಲೂ ವಿಭಿನ್ನ ಮತ್ತು ಅನಿರೀಕ್ಷಿತ ತಿರುವುಗಲು ಪಡೆಯುವಂತೆ ಷರ್ಲಾಕ್  ತನಿಖೆ ನಡೆಸಿದ್ದಾನೆ  ಅದನ್ನೆಲ್ಲವನ್ನೂ ಓದಿ ಸವೆದರೆ ಚಂದ ಎನ್ನುವುದು ನನ್ನ ಭಾವನೆ. 

ಇನ್ನು ಕನ್ನಡದಲ್ಲಿ ಷೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಸರಣಿಯ ಸಮಗ್ರ ಅನುವಾದವನ್ನು ಕನ್ನಡಕ್ಕೆ ತಂದ ವಾಸುದೇವರಾವ್ ಅವರು ಕನ್ನಡದ ಸ್ವಂತ ಕೃತಿ ಎಂಬಂತೆ ಚಿತ್ರಿಸಿದ್ದಾರೆ. ಈಗಾಗಾಲೆ ಅವರ ಅನುವಾದಿತ ಕೃತಿ "ಡ್ರಾಕುಲ" ವನ್ನು ನಾ ಓದಿದ್ದೆ, ಹಾಗಾಗಿ ಷರ್ಲಾಕ್ ಕಥೆ ಓದಿದಮೇಲೆ ಅವರ ಪ್ರತಿಭೆ ಎಂತಹ ಉನ್ನತ ಮಟ್ಟದ್ದು ಎಂದು ಮತ್ತೊಮ್ಮೆ  ಮನದಟ್ಟಾಯಿತು. 

೭ ನೇ ಜುಲೈ ೧೯೩೦ರಲ್ಲಿ ಇಂಗ್ಲೆಂಡಿನ ಕ್ರಾಸ್ಬರೋ ದಲ್ಲಿ  ಅಸುನೀಗಿದ ಡಾಯ್ಲ್ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ಕಿರುಚಿತ್ರ, ಚಲನಚಿತ್ರ, ಸರಣಿ ಕಥೆ, ಬೇರೆ ಭಾಷೆಗಳಿಗೆ ಅನುವಾದ ಇತ್ಯಾದಿ ರೂಪಗಳಲ್ಲಿ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ. 

Sunday 1 January 2017

ಶಿಖರ ಸೂರ್ಯ


ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತ,  ಹುಟ್ಟುಹಬ್ಬದ ದಿನವೇ ಅವರ "ಶಿಖರ ಸೂರ್ಯ" ಕೃತಿಯ ಬಗ್ಗೆ ನನ್ನ ಅಬಿನಂಭಿಪ್ರಾಯವನ್ನು ಹಂಚಿಕೊಳ್ಳಲು ಹೆಚ್ಚು ಸಂತೋಷವಾಗುತ್ತಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ. ಹಾಗೆ ಈ ಪುಸ್ತಕದ ಬಗ್ಗೆ ವಿಮರ್ಶಕರು ಬರೆದಿರುವ ಸಾಲುಗಳನ್ನು ಓದಿದರೇ ಇನ್ನು ಹೆಚ್ಚು ಸಂತೋಷವಾಗುತ್ತದೆ. ಇಂತಹ ಮಹಾನ್ ಕವಿ ಇನ್ನು ನೂರಾರು ವರ್ಷ ಸಂತೋಷವಾಗಿ ಬಾಳಿ ಮತ್ತಷ್ಟು  ಶ್ರೇಷ್ಠ ಕೃತಿಗಳನ್ನು ಕನ್ನಡ  ಸಾಹಿತ್ಯಕ್ಕೆ ಅರ್ಪಿಸಿ ನನ್ನಂತ ಓದುಗರನ್ನು ಸಂತೋಷಪಡಿಸಲಿ ಎಂದು ಹಾರೈಸುತ್ತೇನೆ. 

ಇನ್ನು ಕಥೆಗೆ ಬರುವುದಾದರೆ ಶಿಖರ ಸೂರ್ಯ "ಚಕೋರಿ"ಯ ಮುಂದುವರೆದ ಭಾಗವೆನ್ನಬಹುದು ಅಥವಾ ಸ್ವತಂತ್ರ ಕಾದಂಬರಿ ಎಂದಾದರು ತಿಳಿಯಬಹುದು ಎಂದು ಲೇಖಕರು ಹೇಳಿದ್ದಾರೆ. (ಆದರೆ ನಾನು "ಚಕೋರಿ" ಓದಿಲ್ಲ ಕಾರಣ "ಶಿಖರ ಸೂರ್ಯ"ನನ್ನು ನವಕೃತಿಯಾಗೆ ಓದಿದೆ). ಇಲ್ಲಿ ಬರುವ ಶಿವಾಪುರ, ಕನಕಪುರಿ ಇತಿಹಾಸಗಳು ನಿಜಕ್ಕೂ ರಮಣೀಯವಾಗಿವೆ. ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಇದೊಂದು ಮಹಾಕಾವ್ಯ ಜೊತೆಗೆ ಬೇಗ ಓದಿ ಮುಗಿಸಲು ಅಸಾಧ್ಯವಾದ ಕೃತಿಯಾಗಿದ್ದು ಇದರ ಬಗ್ಗೆ ವಿಮರ್ಶೆ ಬರೆಯಲು ಖಂಡಿತ ನನಗೆ ಸಾಧ್ಯವಿಲ್ಲ. ಹಾಗಾಗಿ ನನಗೆ ತೋಚಿದ ಕೆಲವು ಅಂಶಗಳನ್ನು ಸರಲವಾಗಿ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ.

ಚಕೋರಿಯನ್ನು ಓದಿದವರಿಗೆ ಚಿನ್ನಮುತ್ತ ಮತ್ತು ಚಂದಮುತ್ತನ ಬಗ್ಗೆ ತಿಳಿದಿರುತ್ತದೆ ಆದರೆ ಅದನ್ನು ಓದದೇ "ಶಿಖರ ಸೂರ್ಯ"ನನ್ನು ಓದುವವರಿಗೆ ಪ್ರಸ್ತಾವನೆಯೇ ಕಥೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು.  ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ಚಿನ್ನಮುತ್ತ ಶಿಖರ ಸೂರ್ಯ ಕಾದಂಬರಿಯ ನಾಯಕ ಪುರುಷ. ಇವನೂ ಕಲಾವಿದವಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಮಲೆಯಾಳಿ ಮಂತ್ರ ತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿತಪ್ಪಿ ಬಿದ್ದವನು. ಅಂಥವನನ್ನು ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ (ಪ್ರಜ್ಞೆತಪ್ಪಿ) ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಡು ಬಂದನಲ್ಲ, ಅಲ್ಲಿಂದ ಮುಂದೆ ಶಿಖರ ಸೂರ್ಯನ ಇತಿಹಾಸ ಕಥನ ಆರಂಭವಾಗುತ್ತದೆ.

ಶಿಖರ ಸೂರ್ಯ ಕಾದಂಬರಿಯ ನಾಯಕನಾದರೂ ವಾಸ್ತವದಲ್ಲಿ ಅವನೊಬ್ಬ ಖಳನಾಯಕ ತನ್ನ ಸ್ವಾರ್ಥಕ್ಕೆ, ಸಾಧನೆಗೆ ಯಾರನ್ನು ಬಿಡದೆ ಹಿಂಸೆ ಕೊಡುತ್ತಿದ್ದರೂ ಅದು ಅವರಿಗೆ ತಿಳಿಯದೆ ಅವರ ಪಾಲಿಗೆ ಒಳ್ಳೆಯವನಾಗೆ ಇದ್ದು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವಂತ ಮಹಾನ್ ಸಮಯಸಾಧಕ. ಶಿವಾಪುರದಲ್ಲಿ ಪ್ರಾಣ ಉಳಿಸಿದ ಜಟ್ಟಿಗ ಮತ್ತು ಅವನ ಹೆಂಡತಿಯನ್ನು ತನ್ನ ಸ್ವಾರ್ಥಕ್ಕೆ ನಡೆಸಿಕೊಂಡ ರೀತಿ ನಿಜಕ್ಕೂ ನೋವುಂಟು ಮಾಡುತ್ತದೆ. ಅಲ್ಲಿಂದ ಚಂದಮುತ್ತನಾಗಿದ್ದು ಜಯಸೂರ್ಯನಾಗುತ್ತಾನೆ ಅದು ಹೇಗೆ ಏಕೆ ಎನ್ನುವ ಅಂಶ ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿಗೆ ಬರುತ್ತಾನೆ. 

ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ಅಲ್ಲಿಂದ ಶುರುವಾಗುವುದು ಅವನ ಸಂಚಿನ ಕಥೆ (ಮತ್ತಷ್ಟು ರೋಚಕ). ಕನಕಪುರಿಯ ಭಾಗದಲ್ಲಿ ಬರುವ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬಡೆಗ, ವಿದ್ಯುಲ್ಲತೆ, ಗುಣಶೀಲ, ಶಿಖರ ಸೂರ್ಯನ ಮಕ್ಕಳಾದ ರವಿ ಕೀರ್ತಿ ಮತ್ತು ಮುದ್ದು ಗೌರಿ, ಇತ್ಯಾದಿ ಪಾತ್ರಗಳ ಚಿತ್ರಣ ಒಂದಕ್ಕಿಂತ ಒಂದು ಸೊಗಸಾಗಿವೆ ಹಾಗೆ ಪ್ರತಿಯೊಂದಕ್ಕೂ ಅದರದೇ ಆದ ತೂಕವಿದೆ. 

ಶಿಖರ ಸೂರ್ಯ ಮಾಡಿದ ತನ್ನ ದುರ್ವಿದ್ಯಗಳ ಪ್ರಯೋಗವು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಓದುವಾಗ ಮುಂದೆ ಹೀಗಿರಬಹುದೇ ಎಂದು ಯಾರಿಗೂ ಅನಿಸಿರುವುದಿಲ್ಲ 
ಹೀಗೆ ಹೇಳುತ್ತಾ ಹೋದರೆ ಎಣಿಸಲಾರದಷ್ಟು  ಅಚ್ಚರಿಗಳನ್ನು ಹೇಳಬೇಕಾಗುತ್ತದೆ ಹಾಗಾಗಿ ಅವೆಲ್ಲವನ್ನು ಓದುಗನೇ ಓದಿ ಸವೆಯಲಿ ಎಂದು ಬಯಸುವೆ. 

ಇದರ ಮತ್ತೊಂದು ವಿಶೇಷವೆಂದರೆ ೨೦೧೨ ರ ಮೈಸೂರಿನ ರಂಗಾಯಣವು ಜ. 15 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಡಾ ಮೊದಲ ದಿನ ಈ ನಾಟಕ ಪ್ರದರ್ಶನಗೊಂಡಿತ್ತು ಎನ್ನುವುದು ಮತ್ತೊಂದು ಹೆಮ್ಮೆ. ಕಾಕತಾಳೀಯವೆಂಬಂತೆ ಅವರ ಜನ್ಮದಿನವಾದ ಇಂದೇ ನಾನು ಶಿಖರಸೂರ್ಯನನ್ನೂ ಓದಿ ಮುಗಿಸಿದ್ದು ಹೆಚ್ಚು ಸಂತೋಷ ತಂದಿದೆ. ಮತ್ತೊಮ್ಮೆ ಚಂದ್ರಶೇಖರ ಕಂಬಾರರಿಗೆ ಜನ್ಮದಿನದ ಶುಭಾಶಯಗಳು.