Saturday 14 January 2017

ಚಿತಾದಂತ



ಡಾ. ಕೆ.ಎನ್.ಗಣೇಶಯ್ಯರವರು ಬರೆದ "ಚಿತಾದಂತ" ರೋಚಕ ಕಾದಂಬರಿಗಳಲ್ಲೊಂದು. ಇತಿಹಾಸದ ಎಳೆಯನ್ನು ಹಿಡಿದು ಇಂದಿನ ಕಾಲದವರೆಗೆ ನಡೆದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದರ ಜೊತೆಗೆ ಪ್ರತಿಯೊಂದು ಮಾಹಿತಿಗೂ ಅವರು ಕೊಟ್ಟಿರುವ ನಕ್ಷೆಗಳು, ಟಿಪ್ಪಣಿ, ಚಿತ್ರ ಮತ್ತು ಸಂಬಂಧಪಟ್ಟ ಪುಸ್ತಾಕಗಳ ಮಾಹಿತಿ ಎಲ್ಲವೂ ನಾವು ನಿಜವಾದ ಘಟನೆಗಳಲ್ಲೇ ಬದುಕುತ್ತಿದ್ದೇವೇನೋ ಎನಿಸುತ್ತದೆ. 

ಇದರಲ್ಲಿ ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರ ಅವನ ಸಂಪತ್ತಿನ ಹುಡುಕಾಟ ಇದೆ. ಎರಡು ಸಾವಿರ ವರ್ಷಗಳ ರೋಚಕ ಇತಿಹಾಸ  ಇಲ್ಲಿದೆ. ಅಂದಿನಿಂದ ಇವತ್ತಿನ ಸ್ವತಂತ್ರ ಭಾರತದ ವರೆಗೂ ಬಂದಿರುವ ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಚಾಣಕ್ಯ, ಕೌಟಿಲ್ಯ ಎಲ್ಲಕ್ಕಿಂತ ಮುಖ್ಯವಾಗಿ ಅಲೆಕ್ಸಾಂಡರ್ ನ ಚಿತ್ರಣ ಅತ್ಯಂತ ಆಶ್ಚರ್ಯದಿಂದ ಕೂಡಿದೆ. ಭೌಧ್ದ ಧರ್ಮದ ಬೆಳವಣಿಗೆ ಮತ್ತು ಇತರ ವಿವರ, ಮೌರ್ಯ ರಾಜ್ಯದ ವಿಷ್ಲೇಶಣೆ, ಸಿಕಂದರನ ದಂಡಯಾತ್ರೆಯ ಸಮಯದ ಭಾರತದ ಸ್ಥಿತಿ ಗತಿ ಹಾಗೂ ನಿಗೂಢ ತೇರವಾದಿಗಳ ವಿಷಯ ದೊಂದಿಗೆ ಬುದ್ಧನ ಹಲ್ಲಿನ ವಿಸ್ಮಯಕಾರಿ ಅಂಶಗಳನ್ನು ಈ ಕಾದಂಬರಿ ಒಳಗೊಂಡಿದೆ.ಎಲ್ಲಕ್ಕಿಂತ ರೋಚಕವೆಂದರೆ ಈ ಕಾದಂಬರಿಯಲ್ಲಿ ಬರುವ ಅಂದರೆ ಇಂದಿನ ವಾಸ್ತಕದಲ್ಲಿ ಚಿತ್ರಿತವಾಗಿರುವ ರಚಿತಾ ಎಂಬ ಹುಡುಗಿಯ ಮುತ್ತಾತ ಬರೆದ ಡೈರಿ, ೧೨ ಭಾಗದ ಸಿಕಂದರನ ಸಿರಿ ಎಂದು ನಾಮಾಂಕಿತಗೊಂಡ ಈ ಡೈರಿಯನ್ನು ಓದುವಾಗ ಅಬ್ಬಾ!!!! ಹೀಗೂ ಉಂಟೆ ಎನಿಸುವುದು. 

ಬುದ್ಧನ ಹಲ್ಲಿಗೂ ಅಲೆಗ್ಸಾಂಡರನ  ಸಂಪತ್ತಿಗೆ ಇರುವ ಸಂಬಂಧ,  ಪ್ರಚಲಿತವಾಗಿ ಬುದ್ಧನ ೪ ಹಲ್ಲುಗಳ ಬಗ್ಗೆ ಇರುವ ವಾದ ವಿವಾದ ಏನು, ಅಂದರೆ ಶ್ರೀಲಂಕಾ, ಜಪಾನ್, ಚೈನಾ, ಕಾಂಬೋಡಿಯಾ ಇತ್ಯಾದಿ ದೇಶಗಳಲ್ಲಿ ಇರುವ ಹಲ್ಲಿನಲ್ಲಿ ಯಾವುದು ಸುಳ್ಳು ಯಾವುದು ನಿಜ ಎನ್ನುವ ಸತ್ಯದ ಹುಡುಕಾಟ, ಅದರ ಸುತ್ತ ಹಬ್ಬಿರುವ ದಂತಕತೆಗಳು, .. ತೇರವಾದಿಗಳು ಎಂದರೆ ಯಾರು, ಅವರೆಲ್ಲಿದ್ದರು, ಈಗಲೂ ಇದ್ದಾರೆಯೇ, ಅಲೆಕ್ಸಾಂಡರ ನ ದಂಡಯಾತ್ರೆ ಮತ್ತು ಅವನು ಸಂಗ್ರಹಿಸಿದ ಖಜಾನೆ ನಿಧಿ ಭಾರತದಲ್ಲಿದೆಯೇ, ಅಬ್ಬಾ!!! ಒಂದಕ್ಕೊಂದು ಸಂಬಂಧವಿಲ್ಲವೆಂದು ಎನಿಸುವ ಅಂಶಗಳು ಹೇಗೆ ಬೆಸೆದಿವೆ ಎನ್ನುವುದು ಇಲ್ಲಿನ ಪ್ರಮುಖ ಅಂಶ. ಕುತೂಹಲ ತಡಿಯಲಾರದೆ, ಕ್ಯಾಂಡಿ ದೇವಾಲಯದ ಚಿತ್ರಗಳನ್ನು ಅಂತರ್ಜಾಲದಲ್ಲಿ ನೋಡಿದೆ, ಒಮ್ಮೆಯಾದರೂ ನೋಡಿ ಬರಬೇಕೆಂಬ ಆಸೆ ಮೂಡಿತು. ಇಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. 

ಈ ಕಾದಂಬರಿಯ ಶೀರ್ಷಿಕೆ ಎಷ್ಟು ವಿಭಿನ್ನವಾಗಿದೆ ಏಕೆ ಈ ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಪ್ರಥಮ ಪುಟದಿಂದ ಕೊನೆಯ ಪುಟದವರೆಗೂ ಒಂದೊಂದು ಯೋಚನೆ ಬರುವಂತೆ ಮಾಡುತ್ತದೆ. ಆದರೆ ಎಲ್ಲ ಊಹೆಗಳನ್ನು ಸುಳ್ಳುಮಾಡಿಸುವಲ್ಲಿ ಗಣೇಶಯ್ಯನವರ ಬರವಣಿಗೆ ಯಶಸ್ವಿಯಾಗಿದೆ. 

No comments: