Showing posts with label ನನ್ನ ಲೇಖನ. Show all posts
Showing posts with label ನನ್ನ ಲೇಖನ. Show all posts

Thursday, 25 July 2019

ಬುದ್ಧಿಮಾತು

ಹೆತ್ತವರನ್ನು ನರಳಿಸುವ ಗಂಡುಮಕ್ಕಳು
ಗಂಡನ ಹೆತ್ತವರನ್ನು ನರಳಿಸುವ ಹೆಣ್ಣುಮಕ್ಕಳು ಎಂದಿಗೂ ಉದ್ಧಾರವಾಗುವುದಿಲ್ಲ.
ನಿಮಗೆ ವಯಸ್ಸಾಗುವುದು ಎಷ್ಟು ಸತ್ಯವೋ
ನಿಮ್ಮ ಮಕ್ಕಳ ಆರೈಕೆಯಲ್ಲಿ ನೀವು ಭವಿಷ್ಯದಲ್ಲಿ ಬಾಳಬೇಕು ಎಂಬುದು ಅಷ್ಟೇ ಸತ್ಯ.
ನಿಮ್ಮವರನ್ನು ನಿಸ್ವಾರ್ಥದಿಂದ ಪ್ರೀತಿಸಿ ಆರೈಕೆ ಮಾಡಿದರೆ ದುಪ್ಪಟ್ಟು ಪ್ರೀತಿ ದಕ್ಕುವುದು ನಿಮ್ಮ ಮುಪ್ಪಿನ ಕಾಲದಲ್ಲಿ.
ಏಕೆಂದರೆ ಹೆತ್ತವರ ಶಾಪ ಗಲ್ಲುಶಿಕ್ಷೆಗಿಂತ ಘೋರವಾದದ್ದು. 😢
ವಿ.ಸೂ.: ಎಲ್ಲ ಇದ್ದೂ ಯಾರೂ ಇಲ್ಲದವರಂತೆ ವೃದ್ಧಾಶ್ರಮದಲ್ಲಿ ಬದುಕುತ್ತಿರುವ ಹಿರಿಯರನ್ನು ಕಂಡು ಮನ ನೊಂದು ಬರೆದಿದ್ದು.
😢 😢 😢

Wednesday, 12 July 2017

ನೊಂದ ಮತ್ತು ಸ್ವಾರ್ಥ ಮನಸುಗಳ ನಡುವೆ

ಈ  ಭೂಮಿಯ ಮೇಲೆ ಸಂಭವಿಸುವ ಹುಟ್ಟು ಸಾವು ಕೇವಲ ಆಕಸ್ಮಿಕವೇ ಹೊರತೂ ಇಲ್ಯಾರೂ ಬಯಸಿಯೂ ಹುಟ್ಟಿಲ್ಲ, ಬಯಸಿ ಸಾಯುವುದೂ ಇಲ್ಲ. ಎಲ್ಲವೂ ಕಾಲನಿರ್ಣಯವಷ್ಟೇ ಎಂಬುದು ನನ್ನ ಅಭಿಪ್ರಾಯ. ಹುಟ್ಟುತ್ತಲೇ ಸುಖವ ಹೊತ್ತು ಎಲ್ಲರೂ ಹುಟ್ಟುವುದಿಲ್ಲ, ಹಾಗೆಯೇ ನೋವಿನ ಬುಟ್ಟಿಯ ಹೊತ್ತೂ ಯಾರೂ ಹುಟ್ಟುವುದಿಲ್ಲ. ಆದರೆ ನಮ್ಮ ಸುತ್ತಮುತ್ತ ಬಹಳಷ್ಟು ಜನರು  "ನಾ ಬಯಸಿದ ಬದುಕು ನನ್ನದಾಗಲಿಲ್ಲ, ನಾ ಬದುಕುವ ಬದುಕು ಬೇರೆಯವರ ಒತ್ತಾಯದ ಫಲ, ನನ್ನಾಸೆಗಳೆಲ್ಲವನ್ನು ಸಾಯಿಸಿ ಬೇರೆಯವರ ಖುಷಿಗಾಗಿ ಬದುಕುತಿರುವೆ" ಇತ್ಯಾದಿ ಇತ್ಯಾದಿ ಹೀಗೆ ಅನೇಕರು ಕೊರಗುತ್ತಲೇ ಇರುತ್ತಾರೆ. ಇದಕ್ಕೆಲ್ಲ ಹೊಣೆ ಯಾರು ಎಂಬ ಪ್ರಶ್ನೆಯೇ ಕಾಡುತ್ತಿರುತ್ತದೆ. 

ಬಯಸದೇ ಬಂದ ದೌರ್ಭಾಗ್ಯಕ್ಕೆ ಬಲಿಯಾದವರ ಮನವು ಕಲ್ಲಿನಂತೆ ಎಷ್ಟೇ ಪೆಟ್ಟು ಬಿದ್ದರೂ ಕರಗುವುದಿಲ್ಲ. ಆದರೆ ಅಂತರಂಗದಲ್ಲಿ ಬೆರೆತ ಪ್ರೀತಿ, ಕರುಣೆ, ವಾತ್ಸಲ್ಯವೆಂಬ ಅಮೂಲ್ಯ ಮೌಲ್ಯಗಳು ನಿಷ್ಕರುಣೆಯಿಂದ ಕರಗಿ ಹೋಗುತ್ತವೆ. ಇದಕ್ಕೆ ಹೊಣೆ ಯಾರೆಂದು ದೂರುವುದೊ ಆ ಮನಕ್ಕೆ ತಿಳಿಯದು, ಆದರೆ ಅದಕ್ಕೂ ಆಸೆಗಳಿವೆ, ಕನಸುಗಳಿವೆ, ಭಾವನೆಗಳಿವೆ ಎಂಬ ಸರಳ ಸತ್ಯ ಸ್ವಾರ್ಥ ಮನಗಳಿಗೆ ತಿಳಿಯದು, ತಿಳಿದರೂ ನೊಂದ ಮನಸಿಗೆ ಸ್ಪಂದಿಸುವ ದೊಡ್ಡ ಮನಸು ಮಾಡದು. ವಾಸ್ತವ ಬದುಕು ಹೀಗಿರುವಾಗ ಜೀವನದಲ್ಲಿ ಒಂದು ಕ್ಷಣವಾದರೂ ಪ್ರತಿಯೊಬ್ಬರಿಗೂ "ಯಾಕಾದರೂ ಬದುಕಿದ್ದೇನೋ" ಎಂಬ ನೋವು ಕಾಡಿಯೇ ಕಾದಿರುತ್ತದೆ. ಹಾಗಂತ ಅವರೆಲ್ಲರೂ ಸಾಯುತ್ತಾರೆಯೇ?? ಖಂಡಿತ ಇಲ್ಲ. 

ಹುಟ್ಟು ಹೇಗೆ ನಮ್ಮ ಕೈಯಲ್ಲಿ ಇಲ್ಲವೋ ಹಾಗೆ ಸಾವು ಕೂಡ ನಮ್ಮ ಕೈಯಲ್ಲಿ ಇಲ್ಲ. ಆದರೆ ಅವಕಾಶಗಳು ಮತ್ತು ಅವಕಾಶದ ಹುಡುಕಾಟ, ಬಯಸದ ಬದುಕಿಗೆ ಕೊನೆ, ಬಯಸುವ ಬದುಕಿಗೆ ನಾಂದಿ ಹಾಡುವ ಕಲೆ ಎಲ್ಲವೂ ನಮ್ಮ ಕೈಯಲ್ಲಿವೆ. ಕಣ್ಣಿನ ದೃಷ್ಟಿಯೊಂದನ್ನೇ ನಂಬದೆ ಅಂತರಂಗದ ದೃಷ್ಟಿಯನ್ನು ಎಚ್ಚರಿಸಿ ಬದುಕಿದರೆ ಸ್ವಾರ್ಥ ಮನಸುಗಳು, ಆಡಿಕೊಂಡು ನಗುವ ಮನಸುಗಳು, ದ್ವೇಷಿಸುವ ಮನಸುಗಳು ಇತ್ಯಾದಿ ಎಲ್ಲವೂ ನೊಂದ ಮನಗಳ ಸಾಧನೆಯ ನೋಡಿ ಬೆರಗಾಗುತ್ತವೆ. ಏಕೆಂದರೆ, 

ಹುಡುಕಿದರೆ ಸಿಗುವುವು ನೂರಾರು ನೋವುಗಳು 
ಮಾಡಿದರೆ ಆಗುವುವು ಸಾವಿರಾರು ಸಾಧನೆಗಳು 
ಬಿಟ್ಟು ಸಾಧಿಸಿದರೆ ಎಲ್ಲರ ಮೇಲಿನ ನಿರೀಕ್ಷೆ 
ಇಡೀ ಜಗತ್ತೇ ಮಾಡುವುದು ನಿನ್ನ ಸಾಧನೆಗಳ ಸಮೀಕ್ಷೆ 



Friday, 17 March 2017

ನನ್ನ ಮೆಚ್ಚಿನ ಲೇಖಕಿಗೊಂದು ನಮನ


ನೆನ್ನೆ ಸಂಜೆ ನಮ್ಮ ಕಛೇರಿ ವತಿಯಿಂದ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಅಂತರರಾಷ್ಟ್ರೀಯ ಮಹಿಳಾ ದಿನ" ಆಚರಣೆಯ ಪ್ರಯುಕ್ತ ನನ್ನ ಮೆಚ್ಚಿನ ಲೇಖಕಿ "ಶ್ರೀಮತಿ ಸುಧಾಮೂರ್ತಿ" ಅವರನ್ನು ಆಹ್ವಾನಿಸಿದ್ದರು. ಅವರ ಅನೇಕ ಲೇಖನಗಳು, ಕಾದಂಬರಿಗಳನ್ನು ಓದಿದ ನಾನು  ಅವರ ಕಟ್ಟಾ  ಅಭಿಮಾನಿಯಾಗಿದ್ದೆ, ಜೊತೆಗೆ ಅವರನ್ನು ಒಮ್ಮೆಯಾದರೂ ನೋಡಿ ಮಾತಾಡಿಸಬೇಕೆಂಬ ಆಸೆಯೂ ಹುಟ್ಟಿತ್ತು. ಆದರೆ  ಅವರನ್ನು ನಿರೀಕ್ಷಿಸದೇ ಅನಿರೀಕ್ಷಿತವಾಗಿ ಭೇಟಿಯಾಗುವ ಕ್ಷಣ ಬರುತ್ತದೆ ಎಂದು ನಾ ಎಣಿಸಿರಲಿಲ್ಲ ನಿಜಕ್ಕೂ ಅವರನ್ನು ಭೇಟಿಯಾದ ನನ್ನ ಜೀವನದ ಕ್ಷಣಗಳು ಧನ್ಯವೆನಿಸಿದವು, ನನ್ನ ಹೃದಯ ಆನಂದ ಸಾಗರದಲಿ ಮುಳುಗಿತು ಎಂದರೆ ತಪ್ಪಾಗಲಾರದು. 

"ಇಂಟರ್ನ್ಯಾಷನಲ್ ಫಿಗರ್" ಎಂದೇ ಗುರ್ತಿಸಲ್ಪಡುವ ಇನ್ಫೋಸಿಸ್ ಫೌಂಡರ್ ಎಂಬ ಖ್ಯಾತಿಯ ಈ ಮಹಾತಾಯಿ ನಿಜಕ್ಕೂ ಎಷ್ಟು ಸುಂದರ ಸರಳ ಮತ್ತು ವಿನಯವತಿಯೆಂದು ನೆನ್ನೆ ನನ್ನ ಕಣ್ಣಾರೆ ನೋಡಿ ಕಿವಿಯಾರೆ ಅವರ ಧ್ವನಿಯನ್ನು ತುಂಬಿಸಿಕೊಂಡ ಮೇಲೆ ಅರ್ಥವಾಯ್ತು. ಕರಿಮಣಿ ಸರ ಮತ್ತು ದೇವರು ಕೊಟ್ಟ ಎಂದು ಮಾಸದ ನಗುವೇ ಅವರ ಒಡವೆ ಎಂದರೆ ತಪ್ಪಿಲ್ಲ. ಆಕೆಯ ನಗು, ಉಟ್ಟಿದ್ದ ಸರಳ ಕಾಟನ್ ಸೀರೆ , ಧರಿಸಿದ ಮಾಂಗಲ್ಯ ಸರ ಇಷ್ಟೇ ಅವರ ಅಲಂಕಾರ, ಇವೆಲ್ಲದುದರೆ ಜೊತೆ ಅತ್ಯಂತ ಸುಂದರವಾಗಿ ಕಂಡದ್ದು ಅವರ ನಿಷ್ಕಲ್ಮಶ ನಗು. ಇಷ್ಟು ದಿನ ಅವರ ಬರವಣಿಗೆಗೆ ಅಭಿಮಾನಿಯಾಗಿದ್ದ ನಾನು ನೆನ್ನೆಯಿಂದ ಅವರ ನಗುವಿಗೆ ಅಭಿಮಾನಿಯಾಗಿಬಿಟ್ಟೆ. 

ಮಾತಿನಲ್ಲೇ ಮುಳುಗಿದ್ದ ಎಲ್ಲ ಮಹಿಳಾಮಣಿಗಳು  ಅವರ ಭಾಷಣ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನಿಶಬ್ಧ ಆವರಿಸಿತು. 

"ನಾನು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣುಮಗಳಷ್ಟೇ ಹೊರತು ಯಾರಿಗೂ ರೋಲ್ ಮಾಡೆಲ್ ಅಲ್ಲ, ಪ್ರತಿಯೊಂದು ಹೆಣ್ಣು ಅವರವರ ಮಕ್ಕಳಿಗೆ ಕುಟುಂಬಕ್ಕೆ ರೋಲ್ ಮಾಡೆಲ್ ಆಗಿರುತ್ತಾಳೆ ಏಕೆಂದರೆ ಮಾನಸಿಕವಾಗಿ ಗಂಡಿಗಿಂತ ಹೆಣ್ಣೇ ಶಕ್ತಿಯುತಳಾಗಿರುತ್ತಾಳೆ. ಆದರೆ ಅವರಲ್ಲಿನ ಶಕ್ತಿಯನ್ನು ಅವರೇ ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಹೆಣ್ಣಿಗೆ ಬಾಲ್ಯದಲ್ಲಿ ಅಪ್ಪ, ಯವ್ವನದಲ್ಲಿ ಗಂಡ ಮತ್ತು ವೃದ್ಧಾಪ್ಯದಲ್ಲಿ ಮಗನೆ ನನ್ನ ಭವಿಷ್ಯವೆಂದು ನಂಬಿ ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ಬದುಕುತ್ತಾಳೆ. ತನ್ನ ಸಾಮರ್ಥ್ಯವನ್ನು ಮರೆತು ಬದುಕುತ್ತಾಳೆ. ಅದನ್ನು ದಾಟಿ ಆಕೆ ಬದುಕಬೇಕು ತನ್ನ ಕಲೆಯ ಛಾಪನ್ನು ಹೊರತರುವಲ್ಲಿ ಶ್ರಮಿಸಬೇಕು ಎಂದರು.  ಆದರೆ ಈಗ ಕಾಲ ಬದಲಾಗಿದೆ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ ಅದನ್ನು ನೋಡುತಿದ್ದರೆ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗೆ ಅವರನ್ನು ಹೆಣ್ಣಿನ ಸಾಮರ್ಥ್ಯವನ್ನು ಅರ್ಥಮಾಡಿಸುವುದಲ್ಲದೆ ಸಭೆಯಲ್ಲಿ ನೆರೆದ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಕಿವಿ ಮಾತು ಹೇಳಿದರು, ದಯವಿಟ್ಟು ಹೆಂಗಸರು ಅವರಿವರ ಬಗ್ಗೆ ಮಾತಾಡುವುದನ್ನು ಕಮ್ಮಿ ಮಾಡಿ ಸಮಯವನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ, ಮಾತು ಕಮ್ಮಿಯಾದರೆ ಸಾಧನೆಗಳು ಹೆಚ್ಚಾಗುತ್ತವೆ, ಎಷ್ಟು ಸಾಧ್ಯವೋ ಅಷ್ಟು ಓದಿ, ಏಕಂದರೆ ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್ ಆಗಿರುತ್ತೀರಿ, ನೀವು ಹೇಗೆ ಕೆಲಸ ಮಾತು ನಡೆ ನುಡಿಗಳನ್ನೂ ನಿಭಾಯಿಸುತ್ತೀರೋ ಅದನ್ನೇ ಅವರು ಕಲಿಯುತ್ತಾರೆ ಎಂದರು". 

ಹಾಗೆ ತನ್ನ ಅನುಭವಗಳನ್ನು ತುಂಬಾ ಚಂದವಾಗಿ ಹಂಚಿಕೊಂಡರು. ಅವರು ಹೇಳಿದ ಎಲ್ಲವನ್ನು ಬರೆಯುವಷ್ಟು  ನನಗೆ  ಭಾಷಾಜ್ನ್ಯಾನವಿಲ್ಲ ಹಾಗಾಗಿ ಕೆಲವೊಂದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹೀಗೆ ಅವರು ಮಾತಾಡಿ ಆದಮೇಲೆ ಕಾರ್ಯಕ್ರಮದ ನಿರೂಪಕಿಯೊಬ್ಬರು "ಡಾಲರ್ ಸೊಸೆ" ಮತ್ತು "ಮಹಾಶ್ವೇತೆ" ಕಾದಂಬರಿಗಳ ಪರಿಣಾಮವನ್ನು ಹೇಳಿದಾಗ ನಿಜಕ್ಕೊ ಬಹಳ ಸಂತೋಷವಾಯ್ತು. ಅವರ "ಮನದ ಮಾತು" ಮತ್ತು "ಸಾಫ್ಟಮನ"ದಲ್ಲಿ ಬಂದು ಹೋದ ಅನುಭವಗಳನ್ನು ಸ್ವತಃ ಸುಧಾಮ್ಮನ ಬಾಯಲ್ಲಿ ಕೇಳಿ ಮತ್ತಷ್ಟು ಖುಷಿ  ಆಯ್ತು. 

ಒಟ್ಟಿನಲ್ಲಿ ಸುಧಾಮೂರ್ತಿ ಅವರು ಮತ್ತಷ್ಟು ಬರೆಯಲಿ, ಅವರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ನೆನ್ನೆಯ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ ಎಂದು ಸ್ಮರಿಸುತ್ತ, ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ. 

Wednesday, 21 December 2016

#ಕಿರು_ಲೇಖನ_ಪ್ರಯತ್ನ

(ಓದಿ ಸಲಹೆಗಳಿದ್ದರೆ ಖಂಡಿತ ಹೇಳಿ)

ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.

ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.

#ಪುಸ್ತಕಗಳ_ಬಗ್ಗೆ_ನನ್ನ_ಕಿರುಮಾತು

ನನ್ನ ಪ್ರಕಾರ ಗ್ರಂಥಾಲಯ ಎಂದರೆ ಮನಸಿಗೆ ಇರುವ ಆಸ್ಪತ್ರೆಯಂತೆ ಎನಿಸುತ್ತದೆ. ಜ್ಞಾನ, ಮನರಂಜನೆ, ನೊಂದ ಮನಸಿಗೆ ಸಿಗುವ ಸಾಂತ್ವನ, ಕುಳಿತಲ್ಲೇ ಜಗವ ಸುತ್ತುವ ವಾಹನ, ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಪುರಾಣ, ತಾಂತ್ರಿಕ, ವೈಜ್ಞಾನಿಕ ಇನ್ನು ನೂರಾರು ಸಾವಿರಾರು ವಸ್ತುಗಳ ಅಂಶಗಳ ಆಗರ ಈ ಗ್ರಂಥಾಲಯವೆಂಬ ಸಾಗರ.

ನಮ್ಮ ಮನೆಯ ಸುತ್ತ ಮುತ್ತ ಹೂ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ಹೇಗೆ ಪರಿಸರ ಸುಂದರವಾಗಿ ಕಾಣುವುದೋ ಹಾಗೆ ನಮ್ಮ ಮನೆಯ ತುಂಬಾ ಪುಸ್ತಕಗಳನ್ನು ತುಂಬಿದರೆ ನಮಗೆಂದೂ ಒಂಟಿತನದ ರೋಗ ಕಾಡುವುದಿಲ್ಲ ಎನ್ನುವುದು ನನ್ನ ಭಾವನೆ. ಎಲ್ಲರೂ ಪುಸ್ತಕವನ್ನು ಪ್ರೀತಿಸುವುದಿಲ್ಲ ಹಾಗೆ ಪ್ರೀತಿಸುವುವರೆಂದ ಓದುವುದನ್ನು ಬಿಡುವುದಿಲ್ಲ.

ಜೀವನದಲ್ಲಿ ನಮಗೆ ಎಲ್ಲವೂ ಎಲ್ಲರೂ ಇದ್ದರೂ ಬಹಳಷ್ಟು ಜನ ಪ್ರೀತಿ, ಕಾಳಜಿ, ಬಾಂಧವ್ಯ ಇತ್ಯಾದಿಗಳ ಕೊರತೆಯಿಂದ ಬಳಲುತ್ತಲೇ ಇರುತ್ತಾರೆ. ಹೀಗೆ ಬಳಲುವ ಜನ ಅವರಿಗೆ ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿರುತ್ತಾರೆ ಉದಾಹರಣೆಗೆ ಓದುವುದು, ಬರೆಯುವುದು, ಕಸೂತಿ, ಚಿತ್ರಕಲೆ ಇತ್ಯಾದಿ. ಹೀಗೆ ಓದುಗರ ಬಗ್ಗೆ ಹೇಳಬೇಕೆಂದು ನನಗೆ ಅನಿಸಿದ್ದು ಬರೆಯುತ್ತಿರುವೆ ಪುಸ್ತಕಗಳಲ್ಲಿ ಪ್ರೀತಿ,ಪ್ರೇಮ, ಸ್ನೇಹ, ದ್ವೇಷ, ಜ್ಞಾನ ಎಲ್ಲವೂ ತುಂಬಿರುವುದರಿಂದ ಕೆಲವೊಂದು ಪಾತ್ರಗಳು ಮನಸಿಗೆ ತಾಗಿ ನೊಂದಿರುವವರಿಗೆ ಸಾಂತ್ವನವನ್ನು, ಭರವಸೆ ಕಳೆದುಕೊಂಡವರಿಗೆ ಸಾಧನೆ ಮಾಡುವ ಹುಮ್ಮಸ್ಸನ್ನು ನೀಡಿ ಹೊಸದನ್ನು ಕಲಿಯಲು, ಬೇರೆಯವರಿಗೆ ಕಲಿಸಲು ಪ್ರೇರೇಪಿಸುತ್ತವೆ.

ಹಾಗಾಗಿ ಎಲ್ಲ ಮನಸ್ಥಿತಿಯ ಜನರು ಅವರವರ ಇಚ್ಛೆಯ ಅನುಸಾರ ಪುಸ್ತಕಗಳನ್ನು ಆಯ್ದುಕೊಂಡರೆ ಮನರಂಜನೆಯ ಜೊತೆ ಮನಸ್ಥಿತಿಯು ಸುಧಾರಿಸಿ ಜ್ಞಾನವೂ ಹೆಚ್ಚಾಗುವುದು, ನನಗಾರೂ ಇಲ್ಲ ಎನ್ನುವ ಕೊರಗನ್ನು ನಿವಾರಿಸಿ ಉತ್ತಮ ಸ್ನೇಹಿತನಂತೆ ಸದಾ ನಮ್ಮ ಜೊತೆಯಲ್ಲೇ ಇರುವುದು.